Fake News - Kannada
 

ಭಗತ್ ಸಿಂಗ್ ಲಾಲಾ ದುನಿ ಚಂದ್ ಅವರಿಂದ ಕಾನೂನು ಸಲಹೆ ಪಡೆದರು; ವಿಚಾರಣೆಯಲ್ಲಿ ಆರೆಸ್ಸೆಸ್ ಸಹವರ್ತಿಯೊಬ್ಬರು ಬ್ರಿಟಿಷರನ್ನು ಪ್ರತಿನಿಧಿಸಲಿಲ್ಲ

0

‘ಅಸೆಂಬ್ಲಿ ಬಾಂಬ್ ಸ್ಫೋಟ’ ಪ್ರಕರಣದಲ್ಲಿ ಭಗತ್ ಸಿಂಗ್ ಅವರ ವಿಚಾರಣೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿರುವ ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಎಲ್ಲಾ ವಕೀಲರು ಪ್ರಕರಣವನ್ನು ನಿರಾಕರಿಸಿದಾಗ ನ್ಯಾಯಾಲಯದಲ್ಲಿ ಭಗತ್ ಸಿಂಗ್ ಪರವಾಗಿ ಮುಸ್ಲಿಂ ವಕೀಲ ಅಸಫ್ ಅಲಿ ವಾದಿಸಿದರು ಎಂದು ಪೋಸ್ಟ್ ಹೇಳುತ್ತದೆ; ಆದರೆ ಆರ್​​ಎಸ್​ಎಸ್​ ಸದಸ್ಯ ಮತ್ತು ಆರ್​ಎಸ್​ಎಸ್​ ಸಂಸ್ಥಾಪಕ ಸದಸ್ಯ ಹೆಡ್ಗೆವಾರ್ ಅವರ ನಿಕಟ ಸಹವರ್ತಿ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಅವರು ಬ್ರಿಟಿಷ್ ಸಾಮ್ರಾಜ್ಯದ ಪರವಾಗಿ ವಾದಿಸಿದರು ಮತ್ತು ಭಗತ್ ಸಿಂಗ್​ಗೆ ಮರಣದಂಡನೆ ವಿಧಿಸಿದರು ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಭಗತ್ ಸಿಂಗ್ ಪರವಾಗಿ ಮುಸ್ಲಿಂ ಅಸಫ್ ಅಲಿ ವಾದಿಸಿದರು. ಆರ್​ಎಸ್​ಎಸ್​ ಸದಸ್ಯ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸಿದರು ಮತ್ತು ಭಗತ್ ಸಿಂಗ್​ಗೆ ಮರಣದಂಡನೆ ವಿಧಿಸಿದರು.

ಸತ್ಯಾಂಶ: ಭಗತ್ ಸಿಂಗ್ ಎರಡು ವಿಚಾರಣೆಗಳನ್ನು ಎದುರಿಸಿದರು. ಮೊದಲನೆಯದು ಕೇಂದ್ರ ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಗತ್ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಮತ್ತೊಂದು ‘ಮರ್ಡರ್ ಆಫ್ ಸ್ಯಾಂಡರ್ಸ್’ ಪ್ರಕರಣದಲ್ಲಿ ಭಗತ್ ಸಿಂಗ್​ಗೆ ಮರಣದಂಡನೆ ವಿಧಿಸಲಾಯಿತು. ಸ್ಯಾಂಡರ್ಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಲಾಲಾ ದುನಿ ಚಂದ್ ಅವರ ಸಲಹೆ ಪಡೆದು ಸ್ವತಃ ಭಗತ್ ಸಿಂಗ್ ವಾದಿಸಿದ್ದರು ಎಂದು ಅಧಿಕೃತ ತೀರ್ಪು ದಾಖಲೆಗಳಿಂದ ಸ್ಪಷ್ಟವಾಗಿದೆ. ಆದರೆ ಈ ಪ್ರಕರಣದಲ್ಲಿ ಮಿಸ್ಟರ್​ ನೋದ್ ಅವರು ಬ್ರಿಟಿಷರ ಪರವಾಗಿ ಪ್ರಾಸಿಕ್ಯೂಟರ್ ಆಗಿ ಕಾಣಿಸಿಕೊಂಡರು. ಅಸೆಂಬ್ಲಿ ಬಾಂಬ್ ದಾಳಿ ಪ್ರಕರಣದಲ್ಲಿ ಅಸಫ್ ಅಲಿ ಭಗತ್ ಸಿಂಗ್ ಅವರನ್ನು ಪ್ರತಿನಿಧಿಸಿ ವಾದಿಸಿದರು. ಆದರೆ ಪ್ರಖ್ಯಾತ ಕಾನೂನು ಪಂಡಿತ  ಎ.ಜಿ.ನೂರಾನಿ ಅವರು ತಮ್ಮ ಪುಸ್ತಕದಲ್ಲಿ, ಭಗತ್ ಸಿಂಗ್ ಅವರು ಅಸಫ್ ಅಲಿಯವರ ಸಲಹೆಯೊಂದಿಗೆ ತಮ್ಮ ಪರವಾಗಿ ತಾವೇ ವಾದಿಸಿದ್ದರು ಎಂದು ಪ್ರತಿಪಾದಿಸಿದ್ದಾರೆ. ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಅವರು ಬ್ರಿಟಿಷ್ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಾದಿಸಿದರು ಎಂದು ಅಧಿಕೃತ ದಾಖಲೆ ಹೇಳುತ್ತದೆ. ಆದರೆ ಅವರು ಆರ್​ಎಸ್​ಎಸ್ ಅಥವಾ ಹೆಡ್ಗೆವಾರ್​ರವರೊಂದಿಗೆ ಸಂಬಂಧ ಹೊಂದಿರುವುದರ ಕುರಿತು ಯಾವುದೇ ಸಾಕ್ಷ್ಯಗಳೀಲ್ಲ. ಆದ್ದರಿಂದ, ಪೋಸ್ಟ್​ನಲ್ಲಿ ಮಾಡಿದ ಹಕ್ಕು ತಪ್ಪುದಾರಿಗೆಳೆಯುವಂತಿದೆ.

ಭಗತ್ ಸಿಂಗ್ ಎರಡು ವಿಚಾರಣೆಗಳನ್ನು ಎದುರಿಸಿದರು. ಮೊದಲ ವಿಚಾರಣೆಯು ದೆಹಲಿಯಲ್ಲಿನ ಭಾರತೀಯ ಕೇಂದ್ರ ಶಾಸನ ಸಭೆಯ (CLA) ಬಾಂಬ್ ದಾಳಿಯಲ್ಲಿ ಕೊಲೆಯ ಯತ್ನ ಮತ್ತು ಪಿತೂರಿಯ ಆರೋಪಗಳಿಗೆ ಸಂಬಂಧಿಸಿತ್ತು. ಆದರೆ ಎರಡನೆಯದ್ದು ಲಾಹೋರ್​ನಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ ಹತ್ಯೆಯ ಆರೋಪವಾಗಿತ್ತು. ಈ ಪ್ರಕರಣವನ್ನು ಲಾಹೋರ್ ಪಿತೂರಿ ಪ್ರಕರಣ ಎಂದೂ ಕರೆಯುತ್ತಾರೆ.

ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣ:

08 ಏಪ್ರಿಲ್ 1929ರಂದು, ಭಗತ್ ಸಿಂಗ್ ಬಟುಕೇಶ್ವರ ದತ್ (ದತ್ತ) ಜೊತೆಗೆ ದೆಹಲಿಯ ಕೇಂದ್ರ ಅಸೆಂಬ್ಲಿಗೆ ಕಡಿಮೆ ತೀವ್ರತೆಯ ಬಾಂಬ್  ಎಸೆದರು. ಅಲ್ಲಿ ಭಗತ್ ಸಿಂಗ್ ಮತ್ತು ದತ್ ಇಬ್ಬರೂ ಶರಣಾದರು. ವಿಚಾರಣೆಯು 07 ಮೇ 1929ರಂದು ಪ್ರಾರಂಭವಾಯಿತು ಮತ್ತು 12 ಜೂನ್ 1929ರಂದು ನ್ಯಾಯಾಲಯವು ಭಗತ್ ಸಿಂಗ್ ಮತ್ತು ದತ್ ಇಬ್ಬರಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸುವ ತೀರ್ಪು ಪ್ರಕಟಿಸಿತು.

ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ಡಿಜಿಟಲ್ ದಾಖಲೆಗಳು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾಅಭಿಲೇಖ್ ಪಾತಾಳ ಪೋರ್ಟಲ್​ನಲ್ಲಿ ಲಭ್ಯವಿವೆ. ಅದೇ ಡಾಕ್ಯುಮೆಂಟ್ ಇಂಡಿಯನ್​ಕಲ್ಚರ್​​ಪೋರ್ಟಲ್​ನಲ್ಲಿಯೂ ಲಭ್ಯವಿದೆ (ಸಂಪುಟ 1 ಮತ್ತು ಸಂಪುಟ 2).

ಈ ತೀರ್ಪಿನ ದಾಖಲೆಗಳಲ್ಲಿ, ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಆರೋಪಿಗಳಾಗಿದ್ದು ಮತ್ತು ಅಸಫ್ ಅಲಿ ಇಬ್ಬರಿಗೂ ವಕೀಲರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದಲ್ಲದೆ, ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಅವರು ಬ್ರಿಟಿಷ್ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು ಎಂದು ಡಾಕ್ಯುಮೆಂಟ್ ಹೇಳುತ್ತದೆ.

ಆದರೂ ಪ್ರಖ್ಯಾತ ಕಾನೂನು ವಿದ್ವಾಂಸರಾದ ಎ.ಜಿ.ನೂರಾನಿ ಅವರು ತಮ್ಮ ಪುಸ್ತಕ ‘ದಿ ಟ್ರಯಲ್ ಆಫ್ ಭಗತ್ ಸಿಂಗ್ — ಪಾಲಿಟಿಕ್ಸ್ ಆಫ್ ಜಸ್ಟಿಸ್’ನಲ್ಲಿ ಅಸಫ್ ಅಲಿ ಬಟುಕೇಶ್ವರ್ ದತ್ ಅವರನ್ನು ಪ್ರತಿನಿಧಿಸಿದರೆ, ಭಗತ್ ಸಿಂಗ್ ಅವರ ಸಲಹೆ ಪಡೆದು ತಮ್ಮ ಪರವಾಗಿ ತಾವೇ ವಾದಿಸಿದರು ಎಂದು ಹೇಳಿದ್ದಾರೆ. ಭಗತ್ ಸಿಂಗ್ ತನ್ನ ತಂದೆಗೆ ಬರೆದ ಪತ್ರದ ಆಯ್ದ ಭಾಗವನ್ನು ನೂರಾನಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಕಾನೂನು ಸಲಹೆಗಾರರನ್ನು ಕೋರಿರುವುದು ಉಲ್ಲೇಖಿಸಲಾಗಿದೆ. ಪುಸ್ತಕದಲ್ಲಿ ಹಂಚಿಕೊಂಡ ಆಯ್ದ ಭಾಗವು “ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ನಾನು ಕೆಲವು ವಿಷಯಗಳ ಬಗ್ಗೆ ಕಾನೂನು ಅಭಿಪ್ರಾಯವನ್ನು ತೆಗೆದುಕೊಳ್ಳಲು ಬಯಸುತ್ತೇನೆ, ಆದರೆ ಅವು ಅಷ್ಟು ಮುಖ್ಯವಲ್ಲ”. “ಕರಡು ಗಣನೀಯವಾಗಿ ಭಗತ್ ಸಿಂಗ್ ಅವರದ್ದಾಗಿದ್ದರೂ, ಅವರು ಭಾಷೆಯನ್ನು ಪಾಲಿಶ್ ಮಾಡಿದ್ದಾರೆ ಎಂದು ಆಸಫ್​ಅಲಿ ಪ್ರತಿಪಾದಿಸಿದ್ದಾರೆ’ ಎಂದು ಪುಸ್ತಕದ ಇನ್ನೊಂದು ಉಲ್ಲೇಖಿತ ಭಾಗದಿಂದ ಸ್ಪಷ್ಟವಾಗಿದೆ. ಅಸಫ್ ಅಲಿ ಅವರು ದತ್ ಅವರನ್ನು ಪ್ರತಿನಿಧಿಸಿದರು ಮತ್ತು ಭಗತ್ ಸಿಂಗ್ ತಮ್ಮ ಪರವಾಗಿ ತಾವೇ ವಾದಿಸಿದರು ಎಂದು ಹಿಂದೂ ವರದಿ ಮಾಡಿದೆ.

ಈ ಪುಸ್ತಕವು “ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಬ್ರಿಟಿಷರನ್ನು ಪ್ರತಿನಿಧಿಸಿದರು” ಎಂಬ ಅಂಶವನ್ನು ಪುನರುಚ್ಚರಿಸಿದೆ. ಆದಾಗ್ಯೂ, ರಾಯ್ ಬಹದ್ದೂರ್ ಸೂರಜ್ ನಾರಾಯಣ್ ಆರ್​ಎಸ್​ಎಸ್​ನೊಂದಿಗೆ ಸಂಬಂಧ ಹೊಂದಿದ್ದಾರೆ ಅಥವಾ ಆರ್​ಎಸ್​ಎಸ್ ಸಂಸ್ಥಾಪಕ ಸದಸ್ಯ ಹೆಡ್ಗೆವಾರ್ ಅವರೊಂದಿಗಿನ ನಿಕಟವರ್ತಿಯಾಗಿದ್ದಾರೆ ಎಂದು ತೀರ್ಮಾನಿಸಲು ನಮಗೆ ಯಾವುದೇ ಮಹತ್ವದ ಪುರಾವೆಗಳು ಕಂಡುಬಂದಿಲ್ಲ.

ಲಾಹೋರ್ ಪಿತೂರಿ ಪ್ರಕರಣ:

ಈ ಪ್ರಕರಣದಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ ಗುರು ಅವರು ಸಹಾಯಕ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್ ಅವರನ್ನು ಕೊಂದ ಆರೋಪದಲ್ಲಿ ಮರಣದಂಡನೆ ವಿಧಿಸಲಾಯಿತು. ಅಂತಿಮವಾಗಿ, ಮೂವರನ್ನು 23 ಮಾರ್ಚ್ 1931ರಂದು ಗಲ್ಲಿಗೇರಿಸಲಾಯಿತು.

ಇಂಡಿಯನ್​ಕಲ್ಚರ್​ಪೋರ್ಟಲ್​ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಬಹು ಡಿಜಿಟಲ್ ದಾಖಲೆಗಳು ಲಭ್ಯವಿವೆ. ಈ ಪೋರ್ಟಲ್​ನಲ್ಲಿ ಲಭ್ಯವಿರುವ ತೀರ್ಪಿನ ದಾಖಲೆಯ ಪ್ರಕಾರ, ಈ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗತ್ ಸಿಂಗ್​ಗೆ ಸಲಹೆ ನೀಡಿದವರು ಅಸಫ್ ಅಲಿ ಅಲ್ಲ ಬದಲಿಗೆ ಲಾಲಾ ದುನಿ ಚಂದ್. ಮತ್ತೊಂದೆಡೆ, ಅಸಫ್ ಅಲಿ ಅವರು ನ್ಯಾಯಾಲಯದಲ್ಲಿ ಪ್ರತಿವಾದಿ ವಕೀಲರಾಗಿ ಸುಖ್​ದೇವ್ ರವರನ್ನು ಪ್ರತಿನಿಧಿಸಿದರು.

ದಾಖಲೆಗಳ ಪ್ರಕಾರ, ನೋದ್ ಅವರು ಬ್ರಿಟಿಷ್ ಸಾಮ್ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾಣಿಸಿಕೊಂಡರು. ಇದಲ್ಲದೆ, ದಾಖಲೆಯಲ್ಲಿ ರಾಯ್ ಬಹದ್ದೂರ್ ಸೂರ್ಯವಂಶಂ ಶರ್ಮಾ ಎಂಬ ಯಾವುದೇ ವ್ಯಕ್ತಿಯ ಉಲ್ಲೇಖವಿಲ್ಲ.

ನೂರಾನಿ ಅವರ ಪುಸ್ತಕದಲ್ಲಿಯೂ, ಭಗತ್ ಸಿಂಗ್ ಅವರು ಕಾನೂನು ಸಲಹೆಗಾಗಿ ಲಾಲಾ ದುನಿ ಚಂದ್ ಅವರನ್ನು ಆಯ್ಕೆ ಮಾಡಿಕೊಂಡರು ಮತ್ತು ನೋದ್ ಅವರು ಬ್ರಿಟಿಷರ ಪರವಾಗಿ ಕಾಣಿಸಿಕೊಂಡರು ಎಂದು ಉಲ್ಲೇಖಿಸಿದ್ದಾರೆ. ಲಭ್ಯವಿರುವ ಎಲ್ಲಾ ಮಾಹಿತಿಗಳಿಂದ ಹೇಳುವುದಾದರೆ ಗಲ್ಲುಶಿಕ್ಷೆಗೆ ಕಾರಣವಾದ ಪ್ರಕರಣದಲ್ಲಿ ಭಗತ್ ಸಿಂಗ್ ವಿರುದ್ಧ ವಾದಿಸಿದ ವ್ಯಕ್ತಿ ಆರ್​ಎಸ್​ಎಸ್​ಗೆ ಸಂಬಂಧ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಗತ್ ಸಿಂಗ್ ಲಾಲಾ ದುನಿ ಚಂದ್ ಅವರಿಂದ ಕಾನೂನು ಸಲಹೆಯನ್ನು ಪಡೆದರು; ಆರೆಸ್ಸೆಸ್ ಸಹವರ್ತಿಯೊಬ್ಬರು ವಿಚಾರಣೆಯಲ್ಲಿ ಬ್ರಿಟಿಷರನ್ನು ಪ್ರತಿನಿಧಿಸಲಿಲ್ಲ.

Share.

About Author

Comments are closed.

scroll