ಭಾರತದಲ್ಲಿ ಅಂತರ್ಯುದ್ಧ ನಡೆಯುವ ಸಾಧ್ಯತೆಯಿದೆ, ಎಂದು ಖ್ಯಾತ ವಕೀಲ ಹರೀಶ್ ಸಾಳ್ವೆ ಅವರ ಪೋಸ್ಟ್, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. CAA, NRC, ಜನಸಂಖ್ಯಾ ನಿಯಂತ್ರಣ ಮಸೂದೆ ಮುಂತಾದ ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಿದ ನಂತರ ಅಂತರ್ಯುದ್ಧದ ಸಾಧ್ಯತೆಯಿದೆ ಎಂದು ಹರೀಶ್ ಸಾಳ್ವೆ ಪ್ರತಿಕ್ರಿಯಿಸಿದ್ದಾರೆ ಎಂದು ಈ ಪೋಸ್ಟ್ ಉಲ್ಲೇಖಿಸಿದೆ. ಸ್ವಾತಂತ್ರ್ಯ ನಂತರದ 73 ವರ್ಷಗಳಲ್ಲಿ ಭಾರತದ ಮುಸ್ಲಿಂ ಜನಸಂಖ್ಯೆಯು 3 ಕೋಟಿಯಿಂದ 30 ಕೋಟಿಗೆ ಏರಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ದೇಶದಲ್ಲಿ ಅಂತರ್ಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಖ್ಯಾತ ವಕೀಲ ಹರೀಶ್ ಸಾಳ್ವೆ ಎಚ್ಚರಿಕೆ ನೀಡಿದ್ದಾರೆ.
ಫ್ಯಾಕ್ಟ್: ವೈರಲ್ ಪೋಸ್ಟ್ನಲ್ಲಿ ಉಲ್ಲೇಖಿಸಿರುವಂತೆ ಭಾರತದಲ್ಲಿ ಅಂತರ್ಯುದ್ಧ ಅಥವಾ ಅಶಾಂತಿಯ ಸಾಧ್ಯತೆಯ ಕುರಿತು ಹರೀಶ್ ಸಾಳ್ವೆ ಪ್ರತಿಕ್ರಿಯಿಸಿರುವ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ. ಅಲ್ಲದೆ, ಅನೇಕ ಲೇಖನಗಳ ಪ್ರಕಾರ, ಪೋಸ್ಟ್ನಲ್ಲಿ ಉಲ್ಲೇಖಿಸಲಾದ ಇತರ ವಿಷಯಗಳು ಸಹ ನಿಜವಲ್ಲವೆಂದು ತಿಳಿದುಬಂದಿದೆ. ಭಾರತ ಸರ್ಕಾರವು ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು ಯಾವುದೇ ವರದಿಗಳಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ, 2011 ರ ಹೊತ್ತಿಗೆ ಭಾರತದಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆಯು 17.22 ಕೋಟಿ ಆಗಿತ್ತು. ಹಾಗಾಗಿ ಪೋಸ್ಟ್ನಲ್ಲಿ ಹೇಳಿರುವುದು ತಪ್ಪು.
ಈ ಹಿಂದೆ ವೈರಲ್ ಆದ ಪೋಸ್ಟ್ನಲ್ಲಿ ಉಲ್ಲೇಖಿಸಿದಂತೆ ಖ್ಯಾತ ವಕೀಲ ಹರೀಶ್ ಸಾಳ್ವೆ ಅವರು ದೇಶದಲ್ಲಿ ಅಂತರ್ಯುದ್ಧದ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆಯೇ? ಎಂದು ತಿಳಿಯಲು ಸೂಕ್ತವಾದ ಕೀವರ್ಡ್ಗಳನ್ನು ಬಳಸಿಕೊಂಡು ಇಂಟರ್ನೆಟ್ನಲ್ಲಿ ಹುಡುಕಿದಾಗ ಹರೀಶ್ ಸಾಳ್ವೆ ಪೋಸ್ಟ್ನಲ್ಲಿ ಉಲ್ಲೇಖಿಸಲಾದ ಕಾಮೆಂಟ್ಗಳನ್ನು ಮಾಡಿದ ಯಾವುದೇ ವರದಿಗಳು ಕಂಡುಬಂದಿಲ್ಲ. ಹರೀಶ್ ಸಾಳ್ವೆ ಈ ರೀತಿ ಹೇಳಿಕೆ ನೀಡಿದ್ದರೆ ಖಂಡಿತವಾಗಿಯೂ ಮಾಧ್ಯಮಗಳು ಈ ವಿಷಯವನ್ನು ವರದಿ ಮಾಡುತಿತ್ತು.
ಹಲವಾರು ವರದಿಗಳ ಪ್ರಕಾರ, ಹರೀಶ್ ಸಾಳ್ವೆ ಅವರು ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಇತ್ತೀಚೆಗೆ ಸಿಎಎಯನ್ನು ಬೆಂಬಲಿಸಿದ್ದಾರೆ (ಇಲ್ಲಿ, ಇಲ್ಲಿ, ಇಲ್ಲಿ). ಆದರೆ, ಜನಸಂಖ್ಯಾ ನಿಯಂತ್ರಣ ಮಸೂದೆ ಕುರಿತು ಸಾಳ್ವೆ ಮಾತನಾಡಿರುವ ಯಾವುದೇ ವರದಿಗಳು ನಮಗೆ ಬಂದಿಲ್ಲ.
ಪೋಸ್ಟ್ನಲ್ಲಿ ಮಾಡಲಾದ ಇತರ ಕ್ಲೇಮ್ ಗಳನ್ನು ಕೆಳಗೆ ಒಂದೊಂದಾಗಿ ಪರಿಶೀಲಿಸೋಣ.
ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ:
ರಾಜ್ಯಸಭೆಯಲ್ಲಿ 245 ಸ್ಥಾನಗಳಿವೆ, ಆದರೆ ಪ್ರಸ್ತುತ ಎಂಟು ಖಾಲಿ ಇವೆ – ಜಮ್ಮು ಮತ್ತು ಕಾಶ್ಮೀರದಿಂದ ನಾಲ್ಕು, ನಾಲ್ಕು ನಾಮನಿರ್ದೇಶಿತ ಸ್ಥಾನಗಳು. ಆದ್ದರಿಂದ, ರಾಜ್ಯಸಭೆಯು ಪ್ರಸ್ತುತ 245 ರಲ್ಲಿ 237 ಸದಸ್ಯರನ್ನು ಹೊಂದಿದ್ದು, ರಾಜ್ಯಸಭೆಯಲ್ಲಿ ಪ್ರಸ್ತುತ ಬಹುಮತದ ಗುರುತು 119 (ಇಲ್ಲಿ). ಇತ್ತೀಚೆಗೆ, ಆಗಸ್ಟ್ನಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ 09 ಗೆದ್ದ ನಂತರ ರಾಜ್ಯಸಭೆಯಲ್ಲಿ ಬಿಜೆಪಿಯ ಬಲವು 95ಕ್ಕೆ ಏರಿತು. ರಾಜ್ಯಸಭೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅದು ತನ್ನದೇ ಆದ ಸಂಪೂರ್ಣ ಬಹುಮತವನ್ನು ಹೊಂದಿರಲಿಲ್ಲ. ಅದು ತನ್ನ ಎನ್ಡಿಎ ಮಿತ್ರಪಕ್ಷಗಳೊಂದಿಗೆ ಬಹುಮತದ ಅಂಕವನ್ನು (119) ದಾಟಿದೆ.

ಜನಸಂಖ್ಯಾ ನಿಯಂತ್ರಣ ಮಸೂದೆ:
2019 ರಲ್ಲಿ, ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಅವರು ರಾಜ್ಯಸಭೆಯಲ್ಲಿ ಜನಸಂಖ್ಯೆ ನಿಯಂತ್ರಣ ಮಸೂದೆ ಎಂಬ ಖಾಸಗಿ ಮಸೂದೆಯನ್ನು ಮಂಡಿಸಿದರು, ಎರಡು ಮಕ್ಕಳ ನಿಯಮವನ್ನು ಕಟ್ಟುನಿಟ್ಟಾದ ಮಾನದಂಡಗಳೊಂದಿಗೆ ಜಾರಿಗೆ ತರಲು ಪ್ರಯತ್ನಿಸಿದರು. ಆದಾಗ್ಯೂ, 2022 ರ ಏಪ್ರಿಲ್ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಆಗಿನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಮಧ್ಯಸ್ಥಿಕೆಯೊಂದಿಗೆ ಮಸೂದೆಯನ್ನು ಹಿಂಪಡೆಯಲಾಯಿತು. ರಾಜ್ಯಸಭೆಯಲ್ಲಿ ಮಾತನಾಡಿದ ಆಗಿನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಜನಸಂಖ್ಯೆ ನಿಯಂತ್ರಣ ಸಾಧಿಸಲು ಸರ್ಕಾರವು ಬಲಾತ್ಕಾರಕ್ಕಿಂತ ಹೆಚ್ಚಾಗಿ ಜಾಗೃತಿ ಮತ್ತು ಆರೋಗ್ಯ ಅಭಿಯಾನಗಳನ್ನು ಯಶಸ್ವಿಯಾಗಿ ಬಳಸಿದೆ ಎಂದು ಹೇಳಿದ್ದಾರೆ.

ಹಾಗೆಯೇ, ಭಾರತ ಸರ್ಕಾರವು ಮುಂದಿನ ದಿನಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಯಾವುದೇ ಕಾನೂನನ್ನು ಯೋಜಿಸಲಿದೆ ಎಂಬ ವರದಿಗಳಿಲ್ಲ.
ದೇಶದ ಮುಸ್ಲಿಂ ಜನಸಂಖ್ಯೆ:
ಸ್ವಾತಂತ್ರ್ಯ ನಂತರ 73 ವರ್ಷಗಳಲ್ಲಿ ಭಾರತದ ಮುಸ್ಲಿಂ ಜನಸಂಖ್ಯೆಯು 3 ಕೋಟಿಯಿಂದ 30 ಕೋಟಿಗೆ ಏರಿದೆ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. ಆದರೆ, 2011ರ ಭಾರತೀಯ ಜನಗಣತಿಯ ಪ್ರಕಾರ, ದೇಶದ ಒಟ್ಟು ಮುಸ್ಲಿಂ ಜನಸಂಖ್ಯೆಯು 17.22 ಕೋಟಿಯಾಗಿದೆ, ಇದು ಭಾರತದ ಜನಸಂಖ್ಯೆಯ 14.2% ಆಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆ 17.22 ಕೋಟಿ.
ಅಮೆರಿಕ ಮೂಲದ ಪ್ಯೂ ರಿಸರ್ಚ್ ಸೆಂಟರ್ 2015ರಲ್ಲಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2050ರ ವೇಳೆಗೆ ಭಾರತದ ಒಟ್ಟು ಮುಸ್ಲಿಂ ಜನಸಂಖ್ಯೆ 31.1 ಕೋಟಿ ಮತ್ತು ಹಿಂದೂ ಜನಸಂಖ್ಯೆ 130 ಕೋಟಿ ತಲುಪಲಿದೆ. ಈ ವರದಿಯ ಪ್ರಕಾರ 2020ರ ವೇಳೆಗೆ ಭಾರತದಲ್ಲಿ 21.3 ಕೋಟಿ ಮುಸ್ಲಿಮರಿದ್ದಾರೆ.

ಮೇಲಿನ ಮಾಹಿತಿಯ ಆಧಾರದ ಮೇಲೆ, ಈ ಪೋಸ್ಟ್ನಲ್ಲಿ ಉಲ್ಲೇಖಿಸಲಾದ ವಿಷಯವು ಸುಳ್ಳಾಗಿದೆ. ಅಲ್ಲದೆ, ಖ್ಯಾತ ವಕೀಲ ಹರೀಶ್ ಸಾಳ್ವೆ ಅವರು ಭಾರತದಲ್ಲಿ ಅಂತರ್ಯುದ್ಧದ ಸಾಧ್ಯತೆಯ ಬಗ್ಗೆ ಯಾವುದೇ ಕಾಮೆಂಟ್ಗಳನ್ನು ಮಾಡಿಲ್ಲ ಎಂದು ನಾವು ಖಚಿತಪಡಿಸಬಹುದು.
ಕೊನೆಯದಾಗಿ ಹೇಳುವುದಾದರೆ, ಪ್ರಖ್ಯಾತ ವಕೀಲ ಹರೀಶ್ ಸಾಳ್ವೆ ಭಾರತದಲ್ಲಿ ಅಂತರ್ಯುದ್ಧದ ಸಾಧ್ಯತೆಯ ಬಗ್ಗೆ ಯಾವುದೇ ಕಾಮೆಂಟ್ಗಳನ್ನು ಮಾಡಿಲ್ಲ; ಈ ವೈರಲ್ ಪೋಸ್ಟ್ ಫೇಕ್.